ಕಾಂಗ್ರೆಸ್ ಸಭೆಯಲ್ಲಿ ಚುನಾವಣಾ ಕಾರ್ಯ ತಂತ್ರಗಾರ: ಎಲ್ಲರ ಕಣ್ಣು ಪ್ರಶಾಂತ್ ಕಿಶೋರ್ನತ್ತ
ನವದೆಹಲಿ: ಕಾಂಗ್ರೆಸ್ಸಿನ ರಾಷ್ಟ್ರ ಘಟಕದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ಕರೆದಿದ್ದ ಸಭೆಗೆ ಹಲವು ಹಿರಿಯ ನಾಯಕರು ಹಾಜರಾಗಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಚುನಾವಣಾ ಕಾರ್ಯತಂತ್ರಗಾರ ಪ್ರಶಾಂತ್ ಕಿಶೋರ್ ಅವರೂ ಈ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಆಯೋಜಿಸಲಿರುವ ಚಿಂತನ ಶಿಬಿರ ಮತ್ತು ಮುಂದಿನ ಚುನಾವಣೆಗಳಿಗೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚಿಸಲು ಪಕ್ಷವು ಈ ಸಭೆಯನ್ನು ಆಯೋಜಿಸಿತ್ತು.
ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅಜಯ್ ಮಾಕೆನ್ ಸೇರಿದಂತೆ ಹಲವು ನಾಯಕರು ಸೋನಿಯಾ ನಿವಾಸಕ್ಕೆ ಆಗಮಿಸಿದರು.
ಕಳೆದ ಕೆಲ ವಾರಗಳಿಂದ ಸೋನಿಯಾ ಗಾಂಧಿ ಅವರನ್ನು ಹಲವು ಬಾರಿ ಭೇಟಿಯಾಗಿರುವ ಚುನಾವಣಾ ಕಾರ್ಯ ತಂತ್ರಗಾರ ಪ್ರಶಾಂತ್ ಕಿಶೋರ್ ಕೂಡ ಸಭೆಗೆ ಹಾಜರಾಗಿದ್ದು, ಅವರು ಪಕ್ಷ ಸೇರುವ ಸಾಧ್ಯತೆಗಳಿವೆ ಎಂದು ಸುದ್ದಿ ಸಂಸ್ಥೆ ‘ಐಎಎನ್ಎಸ್’ ವರದಿ ಮಾಡಿದೆ.
ಚಿಂತನ ಶಿಬಿರಕ್ಕೂ ಮುನ್ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಕರೆಯಲು ಕಾಂಗ್ರೆಸ್ ಸಜ್ಜಾಗಿದೆ. ಶಿಬಿರದ ಕಾರ್ಯಸೂಚಿಯನ್ನು ಅಂತಿಮಗೊಳಿಸಲು ಸಿಡಬ್ಲ್ಯೂಸಿ ಸಭೆ ಸೇರಲಿದೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಎದ್ದಿರುವ ಭಿನ್ನಮತ ಶಮನಕ್ಕಾಗಿ ಕಾಂಗ್ರೆಸ್ ಇಷ್ಟರಲ್ಲೇ ‘ಚಿಂತನ ಶಿಬಿರ’ ಆಯೋಜಿಸಲಿದೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ