ಸಂಸತ್ ಭವನದೊಳಗೆ ನೀರು ಸೋರಿಕೆ: ಸಮಸ್ಯೆ ಪರಿಹರಿಸಲಾಗಿದೆ ಎಂದ ಸಚಿವಾಲಯ

ನವದೆಹಲಿ: ಹೊಸದಾಗಿ ನಿರ್ಮಿತವಾದ ಸಂಸತ್ ಭವನದ ಒಳಗೆ ನೀರು ಸೋರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಲೊಕಸಭೆ ಸಚಿವಾಲಯ ಪ್ರತಿಕ್ರಿಯಿಸಿ ‘ಸಮಸ್ಯೆ ಪರಿಹರಿಸಲಾಗಿದೆ’ ಎಂದಿದೆ.
‘ಬುಧವಾರ ದೆಹಲಿ ನಗರದಲ್ಲಿ ಭಾರಿ ಮಳೆ ಸುರಿದ ಕಾರಣ ಕಟ್ಟಡದ ಲಾಬಿಯ ಮೇಲೆ ಇರುವ ಗುಮ್ಮಟಗಳಲ್ಲಿ ಗಾಜು ಅಳವಡಿಸುವಾಗ ಬಳಸಲಾದ ಅಂಟು ಕದಲಿ ಸಣ್ಣ ಸೋರಿಕೆ ಉಂಟಾಗಿದೆ. ಅಗತ್ಯ ಕ್ರಮಗಳ ಮೂಲಕ ಸರಿಪಡಿಸಲಾಗಿದೆ. ಬಳಿಕ ಯಾವುದೇ ರೀತಿಯಲ್ಲಿ ನೀರಿನ ಸೋರಿಕೆ ಕಾಣಿಸಿಕೊಂಡಿಲ್ಲ. ಸಂಸತ್ ಭವನದ ಮಕರ ದ್ವಾರದ ಎದುರು ಸೋರಿಕೆ ಕಾಣಿಸಿಕೊಂಡಿತ್ತು. ತಕ್ಷಣ ಸರಿಪಡಿಸಿ, ಸ್ಥಳವನ್ನು ಸ್ವಚ್ಛಗೊಳಿಸಲಾಗಿದೆ’ ಎಂದು ಲೋಕಸಭಾ ಸಚಿವಾಲಯ ಸ್ಪಷ್ಟನೆ ನೀಡಿದೆ.
ನೈಸರ್ಗಿಕ ಬೆಳಕು ಇರಬೇಕೆಂದು ಹಸಿರು ಸಂಸತ್ತಿನ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಕಟ್ಟಡದ ಹಲವಾರು ಭಾಗಗಳಲ್ಲಿ ಗಾಜಿನ ಗುಮ್ಮಟಗಳನ್ನು ಅಳವಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಸಂಸತ್ ಭವನದಲ್ಲಿ ಸೋರಿಕೆಯ ಕುರಿತು ವಿಡಿಯೊ ಹಂಚಿಕೊಂಡ ವಿಪಕ್ಷ ನಾಯಕರು ಹೊಸ ಕಟ್ಟಡದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವದ ಬಗ್ಗೆ ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡ ಮಾಣಿಕಂ ಟ್ಯಾಗೋರ್, ‘ಹೊರಗಡೆ ಪ್ರಶ್ನೆಪತ್ರಿಕೆ ಸೋರಿಕೆ, ಒಳಗಡೆ ನೀರು ಸೋರಿಕೆ’ ಎಂದು ಬಿಜೆಪಿಯ ಕಾಲೆಳೆದಿದ್ದಾರೆ.
ಇನ್ನೊಂದೆಡೆ ಅಖಿಲೇಶ್ ಯಾದವ್ ಕೂಡ ವಿಡಿಯೊ ಶೇರ್ ಮಾಡಿದ್ದು, ‘ಹೊಸ ಸಂಸತ್ಗಿಂತ ಹಳೆಯ ಸಂಸತ್ ಭವನವೇ ಉತ್ತಮವಾಗಿತ್ತು. ಅಲ್ಲಿ ಹಳೆಯ ಸಂಸದರು ಕೂಡ ಬಂದು ಭೇಟಿಯಾಗಬಹುದಿತ್ತು. ಬಿಲಿಯನ್ಗಟ್ಟಲೆ ಖರ್ಚು ಮಾಡಿ ಕಟ್ಟಿದ ಸಂಸತ್ನಲ್ಲಿ ಈ ನೀರು ಸೋರುವಿಕೆ ಕಾರ್ಯಕ್ರಮ ನಿಲ್ಲುವವರೆಗೆ ನಾವ್ಯಾಕೆ ಹಳೆಯ ಸಂಸತ್ಗೆ ಸ್ಥಳಾಂತರಗೊಳ್ಳಬಾರದು?‘ ಎಂದು ವ್ಯಂಗ್ಯವಾಡಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ