ಲೋಹರ್ಗಲ್‌ ಧಾಮ: ಯಾತ್ರಾರ್ಥಿಗಳ ಮೇಲೆ ಲಾಠಿಚಾರ್ಜ್‌

ಲೋಹರ್ಗಲ್‌ ಧಾಮ: ಯಾತ್ರಾರ್ಥಿಗಳ ಮೇಲೆ ಲಾಠಿಚಾರ್ಜ್‌

ಜೈಪುರ: ಝುಂಝುನೂನಲ್ಲಿರುವ ಲೋಹರ್ಗಲ್‌ ಧಾಮದಲ್ಲಿ ಮಹಿಳೆಯರಿಗೆ ಮೀಸಲಿದ್ದ ಪುಷ್ಕರಣಿಯಲ್ಲಿ ಪುರುಷರು ತೀರ್ಥಸ್ನಾನ ಮಾಡಲು ಮುಂದಾದ ಕಾರಣ ಪೊಲೀಸರು ಯಾತ್ರಾರ್ಥಿಗಳ ಮೇಲೆ ಲಾಠಿಚಾರ್ಜ್‌ ನಡೆಸಿದರು.

ಲೋಹರ್ಗಲ್‌ ಧಾಮದಲ್ಲಿ ಸೂರ್ಯ, ಶಿವ, ಹನುಮಾನ್‌ ದೇಗುಲ ಮತ್ತು ಪಾಂಡವ ಗುಹೆ ಇದೆ. ಇಲ್ಲಿನ ಕಲ್ಯಾಣಿಗೆ ಸಂಬಂಧಿಸಿದಂತೆ ಹಲವು ದಂತಕಥೆಗಳೂ ಇವೆ. ಕಲ್ಯಾಣಿಯಲ್ಲಿ ಮಿಂದೆದ್ದರೆ ಪಾಪಗಳು ತೊಳೆದು ಹೋಗುವುದು, ಕಬ್ಬಿಣವೂ ಕರಗುವುದು ಎಂಬ ನಂಬಿಕೆ ಇದೆ.

ಇಲ್ಲಿ ತೀರ್ಥಸ್ನಾನ ಮಾಡಲು ಸೋಮವಾರ ಮುಂಜಾನೆಯೇ ಅಪಾರ ಯಾತ್ರಾರ್ಥಿಗಳು ನೆರೆದಿದ್ದರು. ಮಹಿಳೆಯರಿಗಿಂತ ‍ಪುರುಷರೇ ಹೆಚ್ಚಿದ್ದರು. ಈ ಸಂದರ್ಭದಲ್ಲಿ ಕೆಲ ಯುವಕರು ಮಹಿಳೆಯರಿಗೆ ಮೀಸಲಿದ್ದ ಕಲ್ಯಾಣಿಯಲ್ಲಿ ತೀರ್ಥಸ್ನಾನ ಮಾಡಲು ಮುಂದಾದರು. ಈ ವೇಳೆ ಗದ್ದಲ ಉಂಟಾಯಿತು, ಪುರುಷರನ್ನು ತಡೆಯಲು ಪೊಲೀಸರು ಲಾಠಿಚಾರ್ಜ್‌ ನಡೆಸಿದರು.

      ಭಕ್ತಸಮೂಹವನ್ನು ನಿಭಾಯಿಸುವಷ್ಟು ಪೊಲೀಸ್‌ ಸಿಬ್ಬಂದಿ ಇರದ ಕಾರಣ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಿತು ಎಂದು ವರದಿಗಳು ಹೇಳಿವೆ.

ಅಂಗಡಿಗಳು ಧ್ವಂಸ: ಪೊಲೀಸರು ಲಾಠಿಚಾರ್ಜ್‌ ಮಾಡುತ್ತಿದ್ದಂತೆಯೇ ಉದ್ರಿಕ್ತ ಯಾತ್ರಾರ್ಥಿಗಳ ಗುಂಪು ಧಾಮದ ಸಮೀಪದ ಅಂಗಡಿಗಳನ್ನು ಧ್ವಂಸ ಮಾಡಿತು, ವಾಹನಗಳನ್ನು ಜಖಂಗೊಳಿಸಿತು. ಪೊಲೀಸರು ಮತ್ತು ಉದ್ರಿಕ್ತ ಯಾತ್ರಾರ್ಥಿಗಳು ಕೈಕೈಮಿಲಾಯಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆದರೆ ಸ್ಥಳದಲ್ಲಿ ಲಾಠಿಚಾರ್ಜ್‌ ನಡೆಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಣ್ಣ ಪೊಲೀಸ್‌ ಪಡೆ ಬಳಸಿ ಯಾತ್ರಾರ್ಥಿಗಳಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಲಾಯಿತು ಎಂದು ತಿಳಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸದಿರಲು ಹೆಚ್ಚು ಬ್ಯಾರಿಕೇಡ್‌ಗಳನ್ನು ಹಾಕಲು ದೇಗುಲ ಆಡಳಿತ ಮಂಡಳಿ ಜೊತೆ ಪೊಲೀಸರು ಮಾತುಕತೆ ನಡೆಸಿದ್ದಾರೆ. ಪ್ರಕರಣ ದಾಖಲಿಸಲಾಗಿದೆ ರಾಜರ್ಷಿ ರಾಜ್‌ ವರ್ಮಾ ಪೊಲೀಸ್‌ ವರಿಷ್ಠಾಧಿಕಾರಿ

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ