ಮಾರ್ಚ್ 4ರಿಂದ ಸಮಸ್ತ ಮದರಸಗಳಲ್ಲಿ ಪಬ್ಲಿಕ್ ಪರೀಕ್ಷೆ: ಒಟ್ಟು 2,68,876 ಪರೀಕ್ಷಾರ್ಥಿಗಳು, ದ.ಕ.ದಿಂದ 9,340 ಮಂದಿ

ಮಂಗಳೂರು, ಮಾ.2: ಪ್ರತಿಷ್ಠಿತ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಅಂಗೀಕೃತ ಮದರಸಗಳ ವಾರ್ಷಿಕ ಪಬ್ಲಿಕ್ ಪರೀಕ್ಷೆ ಮಾರ್ಚ್ 4 ರಿಂದ ಪ್ರಾರಂಭವಾಗಲಿದೆ.
ಕೇರಳದ ಚೇಳಾರಿ ಕೇಂದ್ರೀಕರಿಸಿ ಕಾರ್ಯಾಚರಿಸುವ ಸಮಸ್ತ ಸಿಲಬಸ್ ಕ್ರಮದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ವಿದೇಶ ರಾಷ್ಟ್ರಗಳು ಸೇರಿದಂತೆ 10,596 ಮದರಸಗಳು ನೋಂದಣಿಯಾಗಿದ್ದು, ಭಾರತದಲ್ಲಿ ಮಾರ್ಚ್ 4, 5, 6ನೇ ದಿನಾಂಕಗಳಲ್ಲಿ ಮತ್ತು ವಿದೇಶ ರಾಷ್ಟ್ರಗಳಲ್ಲಿ ಮಾರ್ಚ್ 10 ಮತ್ತು11ನೇ ದಿನಾಂಕಗಳಂದು ಪರೀಕ್ಷೆ ನಡೆಯಲಿದೆ.
ಐದು, ಏಳು, ಹತ್ತು, ಪ್ಲಸ್ ಟು ತರಗತಿಗಳಿಗಾಗಿ ನಡೆಯುವ ಪಬ್ಲಿಕ್ ಪರೀಕ್ಷೆಗೆ 7,582 ಸೆಂಟರ್ ಗಳನ್ನು ನಿಗದಿಪಡಿಸಲಾಗಿದ್ದು 2,68,876 ವಿದ್ಯಾರ್ಥಿಗಳು ಪರೀಕ್ಷಾರ್ಥಿಗಳಾಗಿದ್ದಾರೆ.
ದ.ಕ ಜಿಲ್ಲೆಯಲ್ಲಿ 9,340 ಪರೀಕ್ಷಾರ್ಥಿಗಳು: ಜಿಲ್ಲೆಯಲ್ಲಿ ಒಟ್ಟು 477 ಕೇಂದ್ರಗಳನ್ನು ಪರೀಕ್ಷೆಗೆ ನಿಗದಿಗೊಳಿಸಲಾಗಿದ್ದು 5ನೇ ತರಗತಿಯಲ್ಲಿ 4,543 ವಿದ್ಯಾರ್ಥಿಗಳು, ಏಳನೇ ತರಗತಿಯಲ್ಲಿ 3,751 ವಿದ್ಯಾರ್ಥಿಗಳು, 10ನೇ ತರಗತಿಯಲ್ಲಿ 970 ವಿದ್ಯಾರ್ಥಿಗಳು, ಪ್ಲಸ್ ಟು ತರಗತಿಯಲ್ಲಿ 76 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 9,340 ಪರೀಕ್ಷಾರ್ಥಿಗಳು ಇದ್ದಾರೆ.
ಎರಡು ಹೆಚ್ಚುವರಿ ವಿಭಾಗಿಯ ಕೇಂದ್ರಗಳು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ಇದ್ದ ಮುಲ್ಕಿ, ಮಂಗಳೂರು, ಮಿತ್ತಬೈಲು, ಕಲ್ಲಡ್ಕ, ಪುತ್ತೂರು, ಉಪ್ಪಿನಂಗಡಿ ಡಿವಿಷನ್ಗಳ ಹೊರತಾಗಿ ದೇರಳಕಟ್ಟೆ ಹಾಗೂ ಸುಳ್ಯ ಎರಡು ಹೆಚ್ಚುವರಿ ವಿಭಾಗೀಯ ಕೇಂದ್ರಗಳನ್ನು ಸೇರಿಸಲಾಗಿದ್ದು ಒಟ್ಟು ಎಂಟು ವಿಭಾಗಿಯ ಕೇಂದ್ರಗಳಾಗಿ ವಿಂಗಡಿಸಲಾಗಿದೆ.
ಮುಲ್ಕಿ ವಿಭಾಗದ ಕೇಂದ್ರಸ್ಥಾನವನ್ನು ಮೂಡಬಿದ್ರೆಯ ಹಂಡೇಲು ಖಾದಿರಿಯ್ಯಾ ಮದರಸಕ್ಕೆ ವರ್ಗಾಯಿಸಲಾಗಿದ್ದು, ದೇರಳಕಟ್ಟೆ ವಿಭಾಗಕ್ಕೆ ಹಯಾತುಲ್ ಇಸ್ಲಾಂ ದೇರಳಕಟ್ಟೆ ಟೌನ್ ಮದರಸ ಹಾಗೂ ಸುಳ್ಯ ವಿಭಾಗಕ್ಕೆ ಕಾವು ನೂರುಲ್ ಇಸ್ಲಾಂ ಮದರಸವನ್ನು ಕೇಂದ್ರ ಸ್ಥಾನವಾಗಿ ನಿಗದಿಪಡಿಸಲಾಗಿದೆ. ಕೆಲವೊಂದು ರೇಂಜ್ಗಳ ಡಿವಿಷನ್ ಕೇಂದ್ರಗಳಲ್ಲಿಯೂ ಬದಲಾವಣೆಯಾಗಿದ್ದು, ಸಂಬಂಧಪಟ್ಟವರಿಗೆ ಈಗಾಗಲೇ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಸುತ್ತೋಲೆಗಳನ್ನು ಕಳುಹಿಸಿಕೊಡಲಾಗಿದೆ.
ವಿಭಾಗಿಯ ಕೇಂದ್ರಗಳ ಅಧೀಕ್ಷಕರಾಗಿ ಅಬ್ದುಲ್ಲ ಫೈಝಿ ಆದೂರು, ಕಾಸಿಂ ಮುಸ್ಲಿಯಾರ್ ಮಠ, ಉಮರ್ ದಾರಿಮಿ ಸಾಲ್ಮರ, ಹನೀಫ್ ಮುಸ್ಲಿಯಾರ್ ಬೋಳಂತೂರು, ಮುಹಮ್ಮದ್ ದಾರಿಮಿ ಚೆಂಗಳ, ಫಾರೂಕ್ ದಾರಿಮಿ ತೆಕ್ಕಾರು, ಹಮೀದ್ ದಾರಿಮಿ ಕಕ್ಕಿಂಜೆ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಕಾರ್ಯನಿರ್ವಹಿಸಲಿದ್ದಾರೆ.
ಎಲ್ಲಾ ಪರೀಕ್ಷಾರ್ಥಿಗಳಿಗೆ ಈಗಾಗಲೇ ಭಾವಚಿತ್ರವಿರುವ ಹಾಲ್ ಟಿಕೆಟ್ ಗಳನ್ನು ನೀಡಲಾಗಿದೆ ಎಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ವಿವರಗಳನ್ನು ಹಂಚಿಕೊಂಡರು.
ಸ್ಪೆಷಲ್ ಪರೀಕ್ಷೆ: ಮಾರ್ಚ್ ನಾಲ್ಕರಂದು ನಡೆಯುವ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ಭಾಗವಹಿಸಬೇಕಾದ ಕೆಲವು ವಿದ್ಯಾರ್ಥಿಗಳಿಗೆ ಆ ದಿನ ಎಸ್ಎಸ್ಎಲ್ಸಿ, ಪ್ಲಸ್ ಟು, ವಿಎಚ್ಎಸ್ಇ ಮೋಡೆಲ್ ಪರೀಕ್ಷೆ, ಸಿಬಿಎಸ್ಇ ಪಬ್ಲಿಕ್ ಪರೀಕ್ಷೆ ಮೊದಲಾದವುಗಳಲ್ಲಿ ಭಾಗವಹಿಸಲಿಕ್ಕಿರುವುದರಿಂದ ಪ್ರಸ್ತುತ ವಿದ್ಯಾರ್ಥಿಗಳಿಗೆ ಮಾತ್ರ ಮಾರ್ಚ್ 12 ರಂದು ಆದಿತ್ಯವಾರ ಆಯಾ ಮದರಸ ಪರೀಕ್ಷಾ ಸೆಂಟರಗಳಲ್ಲಿಯೇ ಸ್ಪೆಷಲ್ ಪರೀಕ್ಷೆಯನ್ನು ನಡೆಸಲಾಗುವುದು.
ಮೇಲ್ವಿಚಾರಕರಿಗೆ ಮಾಹಿತಿ ಶಿಬಿರ: ಮೂರನೇ ತಾರೀಕಿನಂದು ಶುಕ್ರವಾರ ಅಪರಾಹ್ನ ಮೂರು ಗಂಟೆಗೆ ವಿಭಾಗಿಯ ಕೇಂದ್ರಗಳಲ್ಲಿ ಆಯಾ ವ್ಯಾಪ್ತಿಯ ಪರೀಕ್ಷೆ ಮೇಲ್ವಿಚಾರಕರಿಗೆ ಸಮಸ್ತ ಮುಫತ್ತಿಶುಗಳ ನೇತೃತ್ವದಲ್ಲಿ ಮಾಹಿತಿ ಶಿಬಿರ ಮತ್ತು ಪರೀಕ್ಷಾ ಪರಿಕರಗಳ ವಿತರಣೆ ನಡೆಯಲಿದೆ. ಮೇಲ್ವಿಚಾರಕರಿಗೆ ಪ್ರತ್ಯೇಕ ಬಾರ್ ಕೋಡ್ ಗಳಿರುವ ಗುರುತಿನ ಚೀಟಿಯನ್ನು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮುಖಾಂತರ ನೀಡಲಾಗಿದ್ದು ಸೇವೆಯಲ್ಲಿರುವ ಮದರಸ ಆಡಳಿತ ಸಮಿತಿಯವರಿಂದ ದೃಢೀಕರಿಸಿ ಪ್ರಸ್ತುತ ಐಡೆಂಟಿಟಿ ಕಾರ್ಡಿನೊಂದಿಗೆ ನಿಗದಿತ ಸಮಯಕ್ಕೆ ತಮಗೆ ತಿಳಿಸಲಾದ ಡಿವಿಶನ್ ಕೇಂದ್ರಗಳಲ್ಲಿ ಹಾಜರಿರಬೇಕು ಎಂದು ತಿಳಿಸಲಾಗಿದೆ.
ಮೌಲ್ಯಮಾಪನ: ಮುಕ್ತಾಯಗೊಂಡ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಆರನೇ ತಾರೀಖಿನಂದು ಸೋಮವಾರವೇ ಪ್ರಾರಂಭಗೊಳ್ಳಲಿದ್ದು ಎಂಟು ಕೇಂದ್ರಗಳನ್ನು ಅದಕ್ಕಾಗಿ ಸಜ್ಜುಗೊಳಿಸಲಾಗಿದೆ. ಆತೂರು ತದ್ ಬೀರುಲ್ ಇಸ್ಲಾಂ ಮದರಸ ಈ ವರ್ಷ ಮೌಲ್ಯಮಾಪನದ ನೂತನ ಕೇಂದ್ರವಾಗಿ ನಿಗದಿಗೊಳಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಆಯಾ ಆಡಳಿತ ಸಮಿತಿ ಪ್ರತಿನಿಧಿಗಳು ತಮ್ಮ ಮದರಸ ಕೊಠಡಿಯಲ್ಲಿ ಹಾಜರಿದ್ದು ಪರೀಕ್ಷೆಗಳ ಸುಗಮಕ್ಕೆ ಎಲ್ಲಾ ಅಗತ್ಯವಾದ ಕಾರ್ಯಗಳನ್ನು ಮಾಡಿಕೊಂಡು ಪರೀಕ್ಷಾ ಮೇಲ್ವಿಚಾರಕರಿಗೆ ಸಹಕಾರ ನೀಡಬೇಕೆಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಪರವಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ