ಪ್ರತಿಭಟನಾಕಾರರ ಕಟ್ಟಡಗಳ ಧ್ವಂಸ: ಪ್ರತಿಕ್ರಿಯೆ ನೀಡಲು ಉತ್ತರ ಪ್ರದೇಶ ಸರಕಾರಕ್ಕೆ ಮೂರು ದಿನಗಳ 'ಸುಪ್ರೀಂ' ಗಡುವು

ನವದೆಹಲಿ: ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮೇಲ್ಮನವಿಗಳಿಗೆ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಪ್ರವಾದಿ ನಿಂದನೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ಗಲಭೆ ನಡೆಸಿದವರಿಗೆ ಸೇರಿದ ಮನೆಗಳನ್ನು ಧ್ವಂಸಗೊಳಿಸುವ ಮೊದಲು ಉತ್ತರ ಪ್ರದೇಶ ಸರ್ಕಾರವು ನಿಯಮಗಳನ್ನು ಪಾಲಿಸಬೇಕು. ಕಾನೂನು ಬಾಹಿರವಾಗಿ ಕಟ್ಟಡ ನೆಲಸಮ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಜಮೀಯತ್ ಉಲಾಮ–ಐ–ಹಿಂದ್ ಎಂಬ ಮುಸ್ಲಿಂ ಸಂಘಟನೆ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರತಿಕ್ರಿಯೆ ದಾಖಲಿಸುವಂತೆ ಹಾಗೂ ಮೂರು ದಿನಗಳ ಒಳಗೆ ಅಫಿಡವಿಟ್ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಯಾಗರಾಜ್ನಲ್ಲಿ ನಡೆದ ಗಲಭೆಯ ಮುಖ್ಯ ಆರೋಪಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ನಾಯಕ ಜಾವೇದ್ ಮೊಹಮ್ಮದ್ ಸೇರಿದಂತೆ, ಹಿಂಸಾಚಾರ ಪ್ರಕರಣದ ಹಲವು ಆರೋಪಿಗಳಿಗೆ ಸೇರಿರುವ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶ ನೀಡಿದ್ದರು. ಅದರಂತೆ ಸ್ಥಳೀಯ ಆಡಳಿತಗಳು ಬುಲ್ಡೋಜರ್ ಬಳಿಸಿ ಆರೋಪಿಗಳ ಮನೆಗಳನ್ನು ನೆಲಸಮ ಮಾಡಿದ್ದವು.
ಮುಸ್ಲಿಂ ಸಂಘಟನೆ ಜಮೀಯತ್ ಉಲಮಾ-ಐ-ಹಿಂದ್ ಪರ ಹಿರಿಯ ವಕೀಲ ಸಿ.ಯು ಸಿಂಗ್ ಮತ್ತು ವಕೀಲ ನಿತ್ಯ ರಾಮಕೃಷ್ಣನ್ ವಾದ ಮಂಡಿಸಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಪ್ರತೀಕಾರಕ್ಕಾಗಿ ಬುಲ್ಡೋಜರ್ಗಳನ್ನು ಬಳಸಿ ಕಟ್ಟಡಗಳನ್ನು ಕೆಡವಲು ಸೂಚಿಸಿದ್ದರು. ನಂತರ ಅಧಿಕಾರಿಗಳು ಕಾನೂನಿನ ಪ್ರಕಾರ ನೋಟಿಸ್ ನೀಡದೆ ಗಲಭೆ-ಆರೋಪಿಗಳ ಮನೆಗಳನ್ನು ಕೆಡವಿದರು ಎಂದು ಅವರು ಸುಪ್ತೀಂ ಕೋರ್ಟ್ಗೆ ತಿಳಿಸಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ