ಕೋವಿಡ್ ಅಲೆ ಇನ್ನಷ್ಟು ಸ್ಫೋಟಗೊಳ್ಳಲಿದೆಯೇ: ಆರೋಗ್ಯ ಬಿಕ್ಕಟ್ಟಿನತ್ತ ಕರ್ನಾಟಕ?

ಬೆಂಗಳೂರು: ಕೋವಿಡ್ ರೋಗಿಗಳ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿರುವಂತೆಯೇ ರಾಜ್ಯದಲ್ಲಿ ಆಮ್ಲಜನಕದ ಕೊರತೆ ಅಧಿಕವಾಗುತ್ತಿದೆ. ಈ ಮೂಲಕ ಕರ್ನಾಟಕವು ಭಾರೀ ಆರೋಗ್ಯ ಬಿಕ್ಕಟ್ಟಿನತ್ತ ಸಾಗಲಾರಂಭಿಸಿದೆ.
ಸದ್ಯ ರಾಜ್ಯಕ್ಕೆ ಸುಮಾರು 500 ಟನ್ಗಳಷ್ಟು ಆಮ್ಲಜನಕ ಪೂರೈಕೆಯಾಗುತ್ತಿದೆ. ತಿಂಗಳಾಂತ್ಯದೊಳಗೆ ಇನ್ನೂ 1,000 ಟನ್ ಆಮ್ಲಜನಕ ದೊರೆಯದಿದ್ದರೆ ಕೋವಿಡ್ ರೋಗಿಗಳ ಚಿಕಿತ್ಸಾ ವ್ಯವಸ್ಥೆಯೇ ಬುಡಮೇಲಾಗುವ ಸನ್ನಿವೇಶ ಎದುರಾಗಿದೆ.
ವೆಂಟಿಲೇಟರ್ ಮತ್ತು ಆಮ್ಲಜನಕದ ಪೂರೈಕೆ ವ್ಯವಸ್ಥೆಯುಳ್ಳ ಐಸಿಯು ಹಾಸಿಗೆಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೊಳವೆ ಮೂಲಕ ಆಮ್ಲಜನಕ ಪೂರೈಸಿ ಕೋವಿಡ್ ರೋಗಿಗಳನ್ನು ಸಾವಿನ ದವಡೆಯಿಂದ ಪಾರು ಮಾಡುವ ಅವಕಾಶವಿದ್ದರೂ, ಆಮ್ಲಜನಕದ ಕೊರತೆಯಿಂದ ವೈದ್ಯರು ಕೈ ಚೆಲ್ಲಿ ಕೂರುವಂತಾಗಿದೆ.
ಈಗ ನಿತ್ಯವೂ ಸುಮಾರು 25,000ದಷ್ಟು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಈಗಾಗಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯವರು, ರೋಗಿಗಳ ಸಂಬಂಧಿಕರು ಆಮ್ಲಜನಕದ ಸಿಲಿಂಡರ್ಗಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಆಮ್ಲಜನಕ ಸಂಗ್ರಹಣೆ ಮತ್ತು ಪೂರೈಕೆ ಘಟಕಗಳನ್ನು ಹೊಂದಿರದ ಸಣ್ಣ ಆಸ್ಪತ್ರೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕೆಲವೆಡೆ ರೋಗಿಗಳನ್ನು ದಾಖಲು ಮಾಡಿಕೊಳ್ಳುವುದಕ್ಕೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೇ ಮೊದಲ ವಾರದಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಲಿದ್ದು, ಮೇ ಮಧ್ಯ ಭಾಗದಲ್ಲಿ ನಾಲ್ಕು ಪಟ್ಟು ಹೆಚ್ಚಾಗಬಹುದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಂದಾಜಿಸಿದೆ. ಮುಂದಿನ 20 ದಿನಗಳಲ್ಲಿ ಬರಬಹುದಾದ ಆಮ್ಲಜನಕದ ಬೇಡಿಕೆ ಸರ್ಕಾರವನ್ನೇ ಕಂಗೆಡಿಸಿದೆ.
ಹಂಚಿಕೆಯಲ್ಲಿ ವ್ಯತ್ಯಾಸ: ರಾಜ್ಯದಲ್ಲಿ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದ ವೈದ್ಯಕೀಯ ಬಳಕೆಯ ಆಮ್ಲಜನಕವನ್ನು ಉತ್ಪಾದಿಸಲಾಗುತ್ತಿದೆ. ಒಟ್ಟಾರೆಯಾಗಿ ನಿತ್ಯವೂ ರಾಜ್ಯದಲ್ಲಿ 878 ಟನ್ ವೈದ್ಯಕೀಯ ಬಳಕೆಯ ಗುಣಮಟ್ಟದ ಆಮ್ಲಜನಕ ಉತ್ಪಾದನೆ ಮಾಡಲಾಗುತ್ತಿದೆ. ಅದರಲ್ಲಿ 300 ಟನ್ ಮಾತ್ರ ರಾಜ್ಯಕ್ಕೆ ಲಭಿಸುತ್ತಿದೆ. ಉಳಿದದ್ದು ಬೇರೆ ರಾಜ್ಯಗಳಿಗೆ ರವಾನೆಯಾಗುತ್ತಿರುವುದು ಸಮಸ್ಯೆ ಬಿಗಡಾಯಿಸಲು ಮೂಲ ಕಾರಣ ಎನ್ನಲಾಗಿದೆ.
ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಕೋವಿಡ್ ಎರಡನೇ ಅಲೆ ಕರ್ನಾಟಕಕ್ಕಿಂತ ಬೇಗ ಸ್ಫೋಟಗೊಂಡಿತ್ತು. ಆಗ, ಈ ಎರಡೂ ರಾಜ್ಯಗಳಿಗೆ ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಹಂಚಿಕೆ ಮಾಡಲಾಗಿದೆ. ಸದ್ಯ ಆಮ್ಲಜನಕ ಉತ್ಪಾದನೆ ಮತ್ತು ಹಂಚಿಕೆಯ ಜಾಲವನ್ನು ಕೇಂದ್ರ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನ ಪಾಲನ್ನು ಪಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ರಾಜ್ಯ ಇದೆ ಎಂದು ಮೂಲಗಳು ಹೇಳಿವೆ.
ಏಪ್ರಿಲ್–ಮೇ ತಿಂಗಳುಗಳಲ್ಲಿ ಎರಡನೇ ಅಲೆ ಸ್ಫೋಟಗೊಳ್ಳಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ 2020ರ ನವೆಂಬರ್ ತಿಂಗಳಲ್ಲೇ ಎಚ್ಚರಿಸಿತ್ತು. ಆಮ್ಲಜನಕದ ಕೊರತೆ ನೀಗುವುದಕ್ಕೆ ರಾಜ್ಯ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ರಾಜ್ಯ ಸರ್ಕಾರದ ಹೊಣೆಗೇಡಿತನದಿಂದಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.
ಗುರುವಾರ ರಾಜ್ಯಕ್ಕೆ 449 ಟನ್ ಆಮ್ಲಜನಕ ಪೂರೈಕೆಯಾಗಿದೆ. ಅದು ಬೇಡಿಕೆಗೆ ಸಮನಾದ ಪ್ರಮಾಣ. ಮುಂದಿನ 20 ದಿನಗಳಲ್ಲಿ ಹೆಚ್ಚುವರಿಯಾಗಿ 1,000 ಟನ್ ಆಮ್ಲಜನಕ ಬೇಕಿದೆ. ಅದನ್ನು ಹೊಂದಿಸುವುದೇ ನಮ್ಮ ಮುಂದಿರುವ ಸವಾಲು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ತಿಳಿಸಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ