ಕೋಮು ಭಾವನೆ ಕೆರಳಿಸುವ ಸಂಸದರ ಪ್ರಯತ್ನ ಖಂಡನೀಯ - ತಮ್ಲೀಖ್ ದಾರಿಮಿ

ಮಡಿಕೇರಿ: ಅಭಿವೃದ್ಧಿ ಬಗ್ಗೆ ಮಾತನಾಡಲಾಗದ ಸಂಸದ ಪ್ರತಾಪ ಸಿಂಹ, ರಾಜಕೀಯ ಅಸ್ತಿತ್ವದ ಉಳಿವಿಗಾಗಿ ಕೇವಲ ಕೋಮು ಭಾವನೆ ಕೆರಳಿಸುವ ಪ್ರಯತ್ನ ಖಂಡನೀಯ ಎಂದು ಎಸ್ಕೆಎಸ್ಎಸ್ಎಫ್ ಕೊಡಗು ಜಿಲ್ಲಾ ಅಧ್ಯಕ್ಷ ತಮ್ಲೀಖ್ ದಾರಿಮಿ ಮಡಿಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟ ಬಂದಂತೆ ವಸ್ತ್ರ ಧರಿಸಿ ಹೋಗಬೇಕೆಂದರೆ ಮದ್ರಸಾಗಳಿಗೆ ಹೋಗಿ ಎಂದು ಹೆಣ್ಣು ಮಕ್ಕಳ ಹಿಜಾಬಿನ ಕುರಿತಾಗಿ ಸಂಸದರು ತುಚ್ಛವಾದ ಮಾತನಾಡಿದ್ದಾರೆ. ಹಿಜಾಬ್ ಮಹಿಳೆಯರಿಗೆ ಇಸ್ಲಾಂ ನೀಡುವ ಒಂದು ರಕ್ಷಾ ಕವಚ. ಅದು ಇಸ್ಲಾಮಿನ ಸಂಸ್ಕೃತಿ, ಸಣ್ಣ ಪ್ರಾಯದಿಂದಲೇ ಹೆಣ್ಣು ಮಕ್ಕಳು ಅದನ್ನು ಧರಿಸುತ್ತಾ ಬರುತ್ತಾರೆ. ಇತ್ತೀಚಿನ ದಿನಗಳ ವರೆಗೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದರಿಂದ ಯಾವುದೇ ತೊಂದರೆಗಳು ಕಂಡುಬಂದಿರಲಿಲ್ಲ. ಆದರೆ ಈಗ ಸಂಘಪರಿವಾರ ಸಂಘಟನೆಗಳ ಷಡ್ಯಂತ್ರಗಳಿಂದಾಗಿ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ವಿವಾದ ತಲೆ ಎತ್ತುತ್ತಿದೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದರಿಂದ ಪ್ರತಾಪ್ ಸಿಂಹ ಒಳಗೊಂಡಂತೆ ಮತೀಯವಾದಿಗಳಿಗೆ ಸಮಸ್ಯೆಯಾದರು ಏನು ? ಮುಸ್ಲಿಂ ಹೆಣ್ಣು ಮಕ್ಕಳು ಅವರ ಇಚ್ಛಾನುಸಾರ ಹಿಜಾಬ್ ಧರಿಸುತ್ತಿದ್ದಾರೆ. ಅದನ್ನು ಎಲ್ಲೂ ಯಾರ ಮೇಲೂ ಬಲವಂತ ಮಾಡುತ್ತಿಲ್ಲ. ಸಂಸದರು, ನಿಮ್ಮ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರುವ ಪ್ರಯತ್ನ ಮಾಡಬೇಡಿ ಎಂಬ ಬೆದರಿಕೆಯ ಕರೆಯನ್ನು ನೀಡುತ್ತಿದ್ದಾರೆ. ಆದರೆ ಇಲ್ಲಿ ಮುಸ್ಲಿಂ ಸಮುದಾಯ ಯಾವತ್ತೂ ಕೂಡ ತಮ್ಮ ಆಚಾರಗಳನ್ನು ಇನ್ನೊಬ್ಬರ ಮೇಲೆ ಹೇರಿದ ಉದಾಹರಣೆ ಇಲ್ಲ. ಆದರೆ ಜೈ ಶ್ರೀರಾಂ ಹೇಳುವಂತೆ ವಯೋವೃದ್ಧರಿಗೂ ಸಹ ಒತ್ತಡ ಹೇರಿ ಆಕ್ರಮಣ ನಡೆಸುತ್ತಿರುವ ಸಂಘಪರಿವಾರದ ಉದಾಹರಣೆಗಳು ಬೇಕಾದಷ್ಟು ಇದೆ. ಇಂತಹ ಸಂಘ ಪರಿವಾರದ ಬೋಧನೆಗಳ ಅಗತ್ಯವಾದರೂ ಏನು ಎಂದು ಅವರು ಪ್ರಶ್ನಿಸಿದರು.
ಕೊಡಗಿನ ಅಭಿವೃದ್ಧಿ ಕಡೆಗೆ ಗಮನ ನೀಡದ ಸಂಸದ ಪ್ರತಾಪ ಸಿಂಹ ಕೊಡಗಿಗೆ ಕಾಲಿಡುವಾಗಲೆಲ್ಲಾ ಒಂದೊಂದು ಪ್ರಚೋದನಕಾರಿ ಹೇಳಿಕೆ ನೀಡುವುದರ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆದು ಜಾಗ ಖಾಲಿ ಮಾಡೋದು ವಾಡಿಕೆಯಾಗಿ ಬಿಟ್ಟಿದೆ. ಇಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕಾದ ಅದೆಷ್ಟೋ ಸಮಸ್ಯಗಳಿವೆ. ಇನ್ನೂ ಮೂಲ ಸೌಕರ್ಯಗಳು ತಲುಪದ ಅದೆಷ್ಟೋ ಕುಟುಂಬಗಳಿವೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರುತ್ತಾರೆ ಎಂದು ನಂಬಿದ ಜನರ ಕಣ್ಣಿಗೆ ಮಣ್ಣೆರಚಲಾಗಿದೆ. ರಸ್ತೆಗಳ ಪರಿಸ್ಥಿತಿ ಹದೆಗೆಟ್ಟಿದೆ. ಕಸ್ತೂರಿ ರಂಗನ್ ವರದಿ, ಹೈಟೆನ್ಷನ್ ಪವರ್ಲೈನ್ ನನ್ನ ಹೆಗಲಿಗೆ ಬಿಡಿ ಎಂದು ಬಹಿರಂಗವಾಗಿ ಹೇಳಿದ ಪ್ರತಾಪ್ ಸಿಂಹ, ಗೆದ್ದ ನಂತರ ಎಲ್ಲವೂ ಮೌನವಾಗಿ ಜನರಿಗೆ ದ್ರೋಹ ಮಾಡಿದ್ದಾರೆ. ಇವುಗಳನ್ನೆಲ್ಲಾ ಬಗೆಹರಿಸಲು ಸಾಧ್ಯವಾಗದ ಸಂಸದರು ದ್ವೇಷ ಹರಡುವ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಆರೋಪಿಸಿದರು.
ಶಾಂತಿಯುತ ಕೊಡಗಿನ ಉತ್ತಮ ವಾತಾವರಣ ನಾಶಪಡಿಸಿ ಜನರ ಮನಸ್ಸಿನಲ್ಲಿ ಕೋಮು ದ್ವೇಷ ಹರಡಿಸುವ ಪ್ರಯತ್ನ ಒಬ್ಬ ಜನಪ್ರತಿನಿಧಿಯಿಂದ ನಡೆಯುತ್ತಿರುವುದು ತುಂಬಾ ಖೇದಕರ ಸಂಗತಿ. ಎರಡು ಜಿಲ್ಲೆಯನ್ನು ಪ್ರತಿನಿಧಿಸುವ ಒಬ್ಬ ಸಂಸದ ತನ್ನ ಸ್ಥಾನವನ್ನು, ಜವಬ್ದಾರಿಯನ್ನು ತಿಳಿಯದ ರೀತಿಯಲ್ಲಿ ದೇಶದ ಸಂವಿಧಾನಕ್ಕೆ ಬೆಲೆ ಕಲ್ಪಿಸದೆ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಭಾರತ ಯಾವುದೇ ಧರ್ಮದ ದೇಶವಲ್ಲ. ಭಾರತದ ಎಲ್ಲಾ ಜಾತಿ ಧರ್ಮಗಳನ್ನೊಳಗೊಂಡು, ಸಂವಿಧಾನ ಎಲ್ಲರಿಗೂ ಸಮಾನ ಹಕ್ಕನ್ನು ನೀಡುತ್ತಿದೆ. ಆದರೆ ಜನರನ್ನು ಸಮಾನವಾಗಿ ಕಂಡು ಎಲ್ಲರ ಏಳಿಗೆಗಾಗಿ ಪ್ರಯತ್ನಿಸಬೇಕಾದ ಒಬ್ಬ ಜನಪ್ರತಿನಿಧಿ ಒಂದು ಮತೀಯ ಸಂಘಟನೆಯ ವಕ್ತಾರನಂತೆ ಕೋಮು ಪ್ರಚೋದನಕಾರಿ ಹೇಳಿಕೆ ನೀಡುತ್ತಲೇ ಬರುತ್ತಿರುವುದು ಖಂಡನೀಯ.
ಮದ್ರಸಾಗಳ ವಿರುದ್ಧ ತುಚ್ಚವಾಗಿ ಮಾತನಾಡುವ ಸಂಸದರು ಈ ಮದ್ರಸಾಗಳು ದೇಶಕ್ಕೆ ನೀಡಿದ ಕೊಡುಗೆಗಳನ್ನು ತಿಳಿದುಕೊಳ್ಳಬೇಕಾಗಿದೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಿಡಿ ಆರಂಭಿಸಿದ್ದು ಇದೇ ಮದ್ರಸಾಗಳು ಎಂಬುದನ್ನು ಅರಿತುಕೊಳ್ಳಬೇಕು.
ನಿಮಗೆ ಇಷ್ಟ ಬಂದಂತೆ ಜೀವಿಸಲು ಪಾಕಿಸ್ತಾನಕ್ಕೆ ಹೋಗಿ ಎಂಬ ಹೇಳಿಕೆ ನೀಡಿದ ಸಂಸದರು ಜಾತಿ ಧರ್ಮ ವ್ಯತ್ಯಾಸ ಇಲ್ಲದೆ ಭುಜಕ್ಕೆ ಭುಜ ಕೊಟ್ಟು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪೂರ್ವಜರ ಇತಿಹಾಸವನ್ನು ತಿಳಿದುಕೊಳ್ಳಬೇಕು. ನಾವು ಇಲ್ಲೇ ಹುಟ್ಟಿ, ನಮ್ಮ ಪೂರ್ವಜರು ತಂದು ಕೊಟ್ಟ ಸ್ವಾತಂತ್ರ್ಯದಿಂದ ಇಲ್ಲಿ ಬದುಕುತ್ತಿದ್ದೇವೆ. ನಮ್ಮ ಮರಣವು ಸಹ ಈ ಪವಿತ್ರ ಭಾರತದ ಮಣ್ಣಿನಲ್ಲಾಗಿರುತ್ತದೆ. ಎಲ್ಲಾ ಸಮುದಾಯವು ಇಲ್ಲಿನ ಸಂವಿಧಾನಕ್ಕೆ ಬೆಲೆಕೊಟ್ಟು, ಕಾನೂನನ್ನು ಪಾಲಿಸಿ ಬದುಕು ಸಾಗಿಸುತ್ತಿದ್ದಾರೆ. ಆದ್ದರಿಂದಲೇ ಭಾರತ ದೇಶವು ಸಧೃಡವಾಗಿದೆ. ಇಲ್ಲಿನ ಸಂವಿಧಾನ ಒಪ್ಪಿಕೊಳ್ಳಲು ಸಾಧ್ಯವಿಲ್ಲದವರು ಈ ದೇಶ ಬಿಟ್ಟು ತೊಲಗಿ ಜಾತ್ಯತೀತ ಜನರಿಗೆ ಸುಗಮ ಬದುಕು ಸಾಗಿಸಲು ಅನುವು ಮಾಡಿಕೊಡಬೇಕಾಗಿದೆ ಎಂದು ತಮ್ಲೀಖ್ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ