ಕೊನೆಗೂ ಕೃಷಿಕರ ಮುಂದೆ ಮಂಡಿಯೂರಿದ ಕೇಂದ್ರ ಸರಕಾರ: ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಾಪಾಸ್ಸಾತಿಗೆ ನಿರ್ಧಾರ

ಕೊನೆಗೂ ಕೃಷಿಕರ ಮುಂದೆ ಮಂಡಿಯೂರಿದ ಕೇಂದ್ರ ಸರಕಾರ: ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಾಪಾಸ್ಸಾತಿಗೆ ನಿರ್ಧಾರ

ನವದೆಹಲಿ: ದೇಶದಾದ್ಯಂತ ರೈತರ ಹೋರಾಟ, ಪ್ರತಿಭಟನೆಗಳನ್ನು ಎದುರಿಸಿರುವ ಕೇಂದ್ರ ಸರ್ಕಾರ ಕೊನೆಗೂ ಕೃಷಿಕರ ಹೋರಾಟದ ಮುಂದೆ ಮಂಡಿಯೂರಿದೆ. ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದರು.

      ಸುಮಾರು ಒಂದು ವರ್ಷದಿಂದ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರಕಾರವು ಹೋರಾಟವನ್ನು ಕಡೆಗಣಿಸಲು ಪ್ರಯತ್ನಿಸಿತ್ತು. ತನ್ನ ವಾದವನ್ನೇ ಮುಂದುವರಿಸಿಕೊಂಡು ಬಂದಿತ್ತು. ಆದರೆ ರೈತರ ಬಲವಾದ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ ಮೂರೂ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಿದೆ. ಈ ತಿಂಗಳಾಂತ್ಯದೊಳಗೆ ಮೂರೂ ಕಾಯ್ದೆಗಳು ಇಲ್ಲದಾಗುವುದು.

      ಮೂರು ಕೃಷಿ ಕಾಯ್ದೆಗಳ ಮೂಲಕ ಸರ್ಕಾರವು ಸಣ್ಣ ರೈತರ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡಿತ್ತು. ಅವರು ಬೆಳೆಯುವ ಬೆಳೆಗೆ ಒಳ್ಳೆಯ ಬೆಲೆ ಸಿಗುವಂತೆ ಮಾಡಲು ಉದ್ದೇಶಿಸಲಾಗಿತ್ತು. ರೈತರು ಮತ್ತು ಕೃಷಿ ವಿಜ್ಞಾನಿಗಳು ಈ ಕಾಯ್ದೆಗಳಿಗಾಗಿ ಹಲವು ವರ್ಷಗಳಿಂದ ಆಗ್ರಹಿಸಿದ್ದರು. ಹಲವು ಸರ್ಕಾರಗಳು ಈ ಕಾಯ್ದೆಯನ್ನು ಜಾರಿ ಗೊಳಿಸುವ ಬಗ್ಗೆ ಆಲೋಚಿಸುತ್ತಿದ್ದವು. ಆದರೆ ನಾವು ಕಾಯ್ದೆಯನ್ನು ಜಾರಿಗೆ ತಂದೆವು. ಕೋಟ್ಯಂತರ ರೈತರು ಈ ಮೂರೂ ಕೃಷಿ ಕಾಯ್ದೆಗಳನ್ನು ಸ್ವಾಗತಿಸಿ, ಬೆಂಬಲ ನೀಡಿದರು. ಆ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

      ಈ ಕೃಷಿ ಕಾಯ್ದೆಗಳಿಂದ ಆಗುವ ಅನಾನುಕೂಲಗಳ ಬಗ್ಗೆ ಒಂದು ಭಾಗದ ರೈತರ ಮನವೊಲಿಸಲು ನಮಗೆ ಸಾಧ್ಯವಾಗಲಿಲ್ಲ. ಹಲವು ವಿಜ್ಞಾನಿಗಳು ಮಾಧ್ಯಮಗಳ ಮೂಲಕ ಅವರಿಗೆ ವಿವರಿಸಲು ಪ್ರಯತ್ನಿಸಿದರು. ನಾವು ರೈತರ ಮಾತುಗಳನ್ನು ಆಲಿಸಲು, ಅವರ ವಿಚಾರಗಳನ್ನು ತಿಳಿಯಲು ಪ್ರಯತ್ನ ಮಾಡಿದೆವು. ಆದರೆ, ಒಂದು ಭಾಗದ ರೈತರಿಗೆ ಅದನ್ನು ಅರ್ಥ ಮಾಡಿಸಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ